Saturday, March 17, 2012

ನುಡಿಮುತ್ತುಗಳು - 33

  • "ದೋಷವನ್ನು ಹುಡುಕುವುದು ಸುಲಭ ಆದರೆ ಅದನ್ನು ಸರಿಪಡಿಸುವುದು ಕಠಿಣ"
  • ಜ್ಞಾನವಂತನಾದ ಮಿತ್ರನು ಜೀವನದ ಬಹುದೊಡ್ಡ ವರದಾನ.
  • ಬೇರೆಯವರನ್ನು ಆಡಿಕೊಂಡು ನೋಡಿ ನಗುವ ಮೊದಲು, ನಿನ್ನನ್ನು ನೀನು ಆಡಿಕೊಂಡು ನಗು.
  • ಸತ್ಯ ಮತ್ತು ನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಮನುಷ್ಯನ ಸಭ್ಯತೆ ಹಾಗೂ ಸಜ್ಜನಿಕೆಯ ಒಂದು ಅಂಗ.
  • ಸಮುದ್ರದಲ್ಲಿ ಸುರಿದ ಮಳೆ, ಹಸಿವಿಲ್ಲದವನಿಗೆ ನೀಡಿದ ಭೋಜನ, ಧನವಂತನಿಗೆ ಕೊಟ್ಟ ದಾನ, ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ.
  • ಮನಸ್ಸಿನಲ್ಲಿ ಭಗವಂತನ ಆಲೋಚನೆ, ನುಡಿಯಲ್ಲಿ ಆತನ ಗುಣಗಾನ, ಕ್ರಿಯೆಯಲ್ಲಿ ಪವಿತ್ರ ಕಾಯಕ ಇದೇ ದೈವ ಸಾಕ್ಷಾತ್ಕಾರದ ಮೂಲ.

Wednesday, February 15, 2012

ನುಡಿಮುತ್ತುಗಳು - 32

ಹುಲ್ಲಾಗು ಬೆಟ್ಟದಡಿ ಮನಕೆ ಮಲ್ಲಿಗೆಯಾಗು
 ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
 ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
 ಎಲ್ಲರೊಳಗೊಂದಾಗು ಮಂಕುತಿಮ್ಮ

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
 ಅಕ್ಕರದ ಬರಹಕ್ಕೆ ಮೊದಲಿಗನದಾರು 
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ 
ದಕ್ಕುವುದೆ ಜಸ ನಿನಗೆ ಮಂಕುತಿಮ್ಮ

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ।
ನಂಬಿಯುಂ ನಂಬದಿಹ ಇಬ್ಬಂದಿ ನೀನು।
ಕಂಬದಿನೊ ಬಿಂಬದಿನೊ ಮೋಕ್ಷವರಿಂಗಾಯ್ತು 
ಸಿಂಬಳದ ನೊಣ ನೀನು ಮಂಕುತಿಮ್ಮ॥

ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ।
ಭವಿಷಿಯವ ಚಿಂತಿಸದೆ ಬದುಕ ನೂಕುತಿರು॥
ವಿವರಗಳ ಜೋಡಿಸುವ ಯಜಮಾನ ಬೇರಿಹನು।
ಸವೆಸು ನೀಂ ಜನುಮವನು-ಮಂಕುತಿಮ್ಮ

ಸೈನಿಕ ನೀನು ಸೇನಾಧಿಪತಿಯೆಲ್ಲಿಹನೊ।
ಆಣತಿಯ ಕಳುಹುತಿಹನವನು ನೀನರಿತು॥ 
ಜಾಣಿನಧಟಿಂ;ಸೋಲು ಗೆಲುವವನೆಣಿಕೆ।
ಕಾಣಿಸನಾಳ್ಕೆಯದು ಮಂಕುತಿಮ್ಮ


Wednesday, February 08, 2012

ನುಡಿಮುತ್ತುಗಳು - 31



ದೇವರೆಂಬುದೇನು ಕಗ್ಗತ್ತಲೆಯ ಗವಿಯೆ?

ನಾವರಿಯಲಾರದೆಲ್ಲದರರೊಟ್ಟು ಹೆಸರೆ ?
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು?‍ ಮಂಕುತಿಮ್ಮ||



ಹುಲ್ಲಾಗು ಬೆಟ್ಟದಡಿ ಮನಕೆ ಮಲ್ಲಿಗೆಯಾಗು 
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
 ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ 
ಎಲ್ಲರೊಳಗೊಂದಾಗು ಮಂಕುತಿಮ್ಮ||

ಹೊಸತನವೆ ಬಾಳು; ಹಳಸಿಕೆಯಲ್ಲ ಸಾವು ಬಿಡು|
ರಸವು ನವನವತೆಯಿಂದನುದಿನವು ಹೊಮ್ಮಿ||
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ|
ಪಸರುತಿರೆ ಬಾಳ್ ಚೆಲುವು-ಮಂಕುತಿಮ್ಮ||

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
 ಮದುವೆಗೋ ಮಸಣಕೋ ಹೋಗೆಂದ 
ಕಡೆಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ||

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|
ಬಿಡದಿರೊಳ ನೆಮ್ಮದಿಯ, ಬಿಡು ಗಾಬರಿಕೆಯ||
ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|
ಗಡುವಿರುವುದೆಲ್ಲಕಂ- ಮಂಕುತಿಮ್ಮ ||

ಅನುಭವದ ಪಾಲೊಳು ವಿಚಾರ ಮಂಥನವಾಗೆ | 
ಜನಯಿಕುಂ ಜ್ಞಾನನವನೀತವೆ ಸುಖದಂ ||
 ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
 ನಿನಗೆ ಧರುಮದ ದೀಪ -- ಮಂಕುತಿಮ್ಮ ||


ಇಪ್ಪತ್ತು ಸಾವಿರದ ಸಂಭ್ರಮದಲ್ಲಿ

ನನ್ನ ಪ್ರಯತ್ನಕ್ಕೆ ಇಷ್ಟೊಂದು ಪ್ರೋತ್ಸಾಹ ದೊರಕ್ಕುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ನನ್ನ ನುಡಿಮುತ್ತುಗಳು ಬ್ಲಾಗ್ ಕಳೆದ ನವೆಂಬರ್ ತಿಂಗಳಲ್ಲಿ ಹದಿನಾರು ಸಾವಿರ ಬಾರಿ ವೀಕ್ಷಣೆಯಾಗಿತ್ತು. ಈಗ ಕೇವಲ ಎರಡುವರೆ ತಿಂಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಇದರೊಂದಿಗೆ ಒಟ್ಟು 20,000 ಬಾರಿ ವೀಕ್ಷಣೆಯಾಗಿದೆ. ಪ್ರತಿಯೊಬ್ಬರ ಜೀವನಕ್ಕೆ ಅವಶ್ಯಕವಾಗಿರುವ ಆದರ್ಶ ವ್ಯಕ್ತಿಗಳ ಮಾತುಗಳು ತುಂಬಾ ಅವಶ್ಯಕ. ಇವುಗಳ ವ್ಯಕ್ತಿಗಳ ಗುರಿಯೆಡೆಗೆ ತಲುಪಿಸುವಲ್ಲಿ ಸಹಕಾರಿಯಾಗಿವೆ. ಕನ್ನಡದಲ್ಲಿ ನುಡಿಮುತ್ತುಗಳ ಸಂಗ್ರಹದ ಕೆಲಸಕ್ಕೆ ಮನ್ನಣೆ ದೊರೆತು, ಈ ತರಹದ ಕನ್ನಡದ ಬ್ಲಾಗ್ ಗಳನ್ನು ಪ್ರೋತ್ಸಾಹಿಸಿರುವುದಕ್ಕೆ ತುಂಬಾ ಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳನ್ನು ಮುಂದುವರಿಸುತ್ತೇನೆ. ಎಲ್ಲಾ ಕನ್ನಡಾಭಿಮಾನಿಗಳಿಗೆ ವಂದನೆಗಳು.

ನುಡಿಮುತ್ತುಗಳು ಬ್ಲಾಗ್ 2009 ಜೂನ್ ತಿಂಗಳಲ್ಲಿ ಪ್ರಾರಂಭವಾಯಿತು. ನಂತರ ತನ್ನ ವಿಸ್ತಾರತೆಯನ್ನು ಬೆಳಸಿಕೊಂಡು ಓದುಗರ ಸಂಖ್ಯೆಯನ್ನು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಈ ದಿನದ ಪ್ರಕಾರ ನನ್ನ ಬ್ಲಾಗಿನ ಅಂಕಿಅಂಶ ಈ ಕೆಳಕಂಡತ್ತಿದೆ.

India
19,253
United States
130
United Arab Emirates
109
Saudi Arabia
69
Kuwait
62
Norway
53
Germany
30
United Kingdom
24
Malaysia
20
Singapore
13 
Total : 20,013
as per date: 08/02/2012



ಕನ್ನಡ ಬಳಸಿ - ಕನ್ನಡ ಉಳಿಸಿ




ಇಂತಿ ನಿಮ್ಮವ,
ಮಂಜುನಾಥ್.ಎಂ.ಕೆ

Friday, November 11, 2011

ಹದಿನಾರು ಸಾವಿರದ ಸಂಭ್ರಮ

ಈ ನನ್ನ ನುಡಿಮುತ್ತುಗಳು ಬ್ಲಾಗ್ ಹದಿನಾರು ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಇದು ನನ್ನ ನುಡಿಮುತ್ತುಗಳ ಸಂಗ್ರಹ ಪ್ರಯತ್ನಕ್ಕೆ ಸಿಕ್ಕ ಫಲ. ನಾನು ಈ ಬ್ಲಾಗ್ ಪ್ರಾರಂಭಿಸಿ ಎರಡು ವರ್ಷವಾಯಿತು. ಈ ಅವಧಿಯಲ್ಲಿ ಇಷ್ಟು ಬಾರಿ ವೀಕ್ಷಣೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಮತ್ತು ಇನ್ನಷ್ಟು ನುಡಿಮುತ್ತುಗಳ ಸಂಗ್ರಹಕ್ಕೆ ಪ್ರಯತ್ನ ಮಾಡುತ್ತೇನೆ. ಆದರೆ ನನ್ನ ಈ ಬ್ಲಾಗಿನಿಂದ ನುಡಿಮುತ್ತುಗಳನ್ನು ನೇರವಾಗಿ ನಕಲಿಸಿ ಬೇರೆ ಬ್ಲಾಗಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ ಬ್ಲಾಗಿನಲ್ಲಿ ಇಲ್ಲದ ನುಡಿಮುತ್ತುಗಳನ್ನು ಸಂಗ್ರಹ ಮಾಡಿದರೆ ಅಂತರ್ಜಾಲ ಜಗತ್ತಿಗೆ ಕನ್ನಡಿಗರ ಕೊಡುಗೆಯಾಗುತ್ತದೆ ಎಂಬುದು ನನ್ನ ಆಶಯ.


ನನ್ನ ಎಲ್ಲ ಕನ್ನಡ ಬಂಧು ಮಿತ್ರರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. 

ಕನ್ನಡ ಬಳಸಿ - ಕನ್ನಡ ಉಳಿಸಿ


ಇಂತಿ ನಿಮ್ಮವ,
ಮಂಜು.ಎಂ.ಕೆ

Wednesday, November 09, 2011

ನುಡಿಮುತ್ತುಗಳು - 30

ಹುಟ್ಟು - ಸಾವು ಈ ಎರಡು ಪದಗಳ ಅಕ್ಷರಗಳು ಎರಡಾದರೂ ಈ ಎರಡರ ನಡುವಿನ ಬದುಕು ತುಂಬಾ ನಿಗೂಢ.


ಪ್ರೀತಿ ಮತ್ತು ಸ್ನೇಹ ಒಂದು ನಾಣ್ಯದ ಎರಡು ಮುಖಗಳು. ಸ್ನೇಹದ ಬಳಿಯಿಂದ ಪ್ರೀತಿ ಮರವಾಗಿ ಬೆಳೆಯುತ್ತದೆ.


ಬದುಕಿನ ನಿಗೂಢಗಳನ್ನು ಅರಿಯುವ ಮೊದಲು ಮಾನವ ನಿನ್ನನ್ನು ನೀನು ಮೊದಲು ತಿಳಿ.


ಬದುಕಲು ಸಾವಿರ ಭಾಷೆಗಳಿರಬಹುದು ಆದರೆ ಪ್ರೀತಿಸಲು ಕನ್ನಡವೊಂದೇ ಸಾಕು.


- ಮಾ.ಕೃ.ಮಂಜು

Monday, May 02, 2011

ನುಡಿ ಮುತ್ತುಗಳು - 29


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.
ಹಿತೋಪದೇಶ, ಸುಹೃದ್ಭೇದ

ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್|
ಅವರೆಷ್ಟು ಯಶವಂತರ್ ಎನುವ ಕರುಬಿನಲಿ||
ಭವಿಕ ನಿನಗೆಷ್ಟಿಹುದೊ ಮರೆದು ನೀಂ ಕೊರಗುವುದು|
ಶಿವನಿಗೆ ಕೃತಜ್ಞತೆಯೇ?-ಮಂಕುತಿಮ್ಮ


Tuesday, February 15, 2011

ನುಡಿಮುತ್ತುಗಳು - 28

ಕುಲಗೆಟ್ಟವರ ಚಿಂತೆ ಒಳಗಿರ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು
ಕುಲವಾದರಯ್ಯ ಸರ್ವಜ್ಞ
ಸರ್ವಜ್ಞ






ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ
— ಟಿ.ಪಿ.ಕೈಲಾಸಂ

ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು.
— ಥಾಮಸ್

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
— ಮಾಸ್ತಿ

ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು

ಹೆಂಡತಿ ಒಂದು ಕನ್ನಡಿ ಇದ್ದಂತೆ ,ಅದರಲ್ಲಿ ಕಾಣುವ ಪ್ರತಿಬಿಂಬವೇ ಪತಿ.
- ತ್ರಿವೇಣಿ


ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ

ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ
-ಡಿ.ವಿ.ಜಿ.


Wednesday, June 24, 2009

ನುಡಿ ಮುತ್ತುಗಳು - ೨೭

ನಾಚಿಕೆ ಅನ್ನುವುದನ್ನು ಬಿಟ್ಟಾಗ ಮಾನವ ಮೃಗನಾಗುತ್ತಾನೆ.
-ಯಾರೋ

ನಿಮ್ಮ ನಿನ್ನೆಯ ದಿನ ಇಂದಿನ ದಿನವನ್ನು ನುಂಗದಂತೆ ನೋಡಿಕೊಳ್ಳಿ.

ನಗಲು ಬರುವವನು ಮಾತ್ರ ಇತರರನ್ನೂ ನಗಿಸಬಲ್ಲ.
-ವಿಟ್ ಮನ್

ನಾವು ನಮ್ಮನ್ನೇ ಅಲಕ್ಷಿಸದಿರುವುದು ನಮ್ಮ ಮೊದಲ ಕರ್ತವ್ಯ.

ನಿರಾಸೆ ಮರಣದ ಮತ್ತೊಂದು ಹೆಸರು.
-ಟಾಲ್ ಸ್ಟಾಯ್

ನಕ್ಕು ನಗಿಸುವಾ ನಗುಲೇಸು.

"ನಡೆದುಬಂದ ದಾರಿ ಕಡೆಗೆ ಹೊರಳಿಸಬೇಡ ಕಣ್ಣನು"
-ಅಡಿಗರು

ನೋವೆಲ್ಲಾ ಜೀವಕ್ಕೆ ಪುಟವಿಡುವ ಪಾಕ.
-ಕನ್ ಫ್ಯೂಷಿಯಸ್

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ .
-ಅಡಿಗರು


ನುಡಿ ಮುತ್ತುಗಳು - ೨೬

ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ.

ಜಗತ್ತಿನಲ್ಲಿ ರೆಕ್ಕೆಗಳುಳ್ಳ ಎರಡನೆಯ ಸುಂದರ ವಸ್ತುವೆಂದರೆ ಪತಂಗ; ಮೊದಲನೆಯದು ಹಣ.
-ಅಜ್ಞಾನಿ

ತಾಳ್ಮೆಯಿಂದ ಕಾಯುವುದೇ ಯಶಸ್ಸಿನ ಗುಟ್ಟು.
-ವಿವೇಕವಾಣಿ

ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ.
-ಸ್ವಾಮಿ ವಿವೇಕಾನಂದ

ತನಗೆ ತಾನೇ ಕಟ್ಟುಪಾಡನ್ನು ವಿಧಿಸಿಕೊಳ್ಳುವವನೇ ಸ್ವತಂತ್ರನಾದ ವ್ಯಕ್ತಿ.

ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.
-ಅನಕೃ

ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು.
-ಲೋಕೋಕ್ತಿ

ದುಡಿಮೆ ಮುನ್ನಡೆಗೆ ಕೀಲಿ.
-ನಾಣ್ನುಡಿ

ದೇವರು ಒಬ್ಬನೇ. ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ.
-ಉಪನಿಷತ್

ದುಡ್ಡು ಎಂದರೆ ದುಡಿದು ತರಬೇಕಾದ ವಸ್ತು.




ನುಡಿ ಮುತ್ತುಗಳು - ೨೫

ಕಾಲ ಎನ್ನುವುದು ನಿಂತ ನೀರಲ್ಲ ಹರಿಯುತ್ತಿರುವ ಪ್ರವಾಹ.
-ಷೇಕ್ಸ್ ಪಿಯರ್

ಕಳೆದುಹೋದ ಸುಖವನ್ನು ನೆನಪಿಸಿಕೊಳ್ಳುವುದೇ ದುಃಖಗಳಲ್ಲಿ ದುಃಖ.

ಕಣ್ಣುಗಳ ಬದಲಾಗಿ ಹೃದಯದಿಂದ ನೋಡುವುದೇ ತಾಳ್ಮೆ.
-ನೋಟ್ಸ್

ಕಾವ್ಯೋಪಾಸನೆಯು ಉತ್ತಮ ಆತ್ಮ ಸಂಸ್ಕಾರ.
-ಡಿವಿಜಿ

ಕೀರ್ತಿ ಬಂದಾಗ ನೆನಪಿನ ಶಕ್ತಿ ಅಳಿಯುತ್ತದೆ.
-ಹೆನ್ರಿವಾರ್ಡ್ ಬೇಚರ್

ಕ್ರೂರ ಹುಲಿಗಿಂತ ಕ್ರೂರವಾದುದೆಂದರೆ ಜನರನ್ನು ಹಿಂಸಿಸುವ ಸರಕಾರ.
-ಕನ್ ಫ್ಯೂಷಿಯಸ್

ಕೆಟ್ಟ ಮಾತಿನೊಡನೆ ಗೆಳೆತನವು ಕೊನೆಗೊಳ್ಳುತ್ತದೆ.

ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.
-ಸರ್ ಎಂ.ವಿ

ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು.
-ಅಡಿಗರು

ಚೆನ್ನಾಗಿ ಮುಚ್ಚಿಟ್ಟ ಪುಸ್ತಕ ಕೇವಲ ಒಂದು ಕಾಗದದ ಕಂತೆ.

ಕಾಮವಿದ್ದವನಿಗೆ ರಾಮನಿಲ್ಲ: ರಾಮನಿದ್ದವನಿಗೆ ಕಾಮವಿಲ್ಲ; ಕಾಮವನ್ನು ಗೆದ್ದವನು ರಾಮನನ್ನು ಗೆಲ್ಲಬಲ್ಲ.
-ಓಶೋ